Keshavanama ಕೇಶವನಾಮ
- madhwamaanasa3
- Mar 20, 2023
- 2 min read
Updated: Jan 11
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು |
ದೋಷರಾಶಿ ನಾಶಮಾಡು ಶ್ರೀಶ ಕೇಶವ ||
ಶರಣು ಹೊಕ್ಕೆನಯ್ಯ ಎನ್ನ ಮರಣಸಮಯದಲ್ಲಿ ನಿನ್ನ |
ಚರಣಸ್ಮರಣೆ ಕರುಣಿಸಯ್ಯ ನಾರಾಯಣ ||
ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ |
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ ||
ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||
ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ |
ಶಿಷ್ಟರೊಡನೆ ಇಟ್ಟು ಕಷ್ಟಬಿಡಿಸು ವಿಷ್ಣುವೇ ||
ಮದನನಯ್ಯ ನಿನ್ನ ಮಹಿಮೆ ವದನದಿಂದ ನುಡಿಯುವಂತೆ |
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||
ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡು |
ಜವನ ಬಾಧೆಯನ್ನು ಬಿಡಿಸೊ ಶ್ರೀ ತ್ರಿವಿಕ್ರಮ ||
ಕಾಮಜಾನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ |
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||
ಮೊದಲು ನಿನ್ನ ಪಾದ ಪೂಜೆ ಒದಗುವಂತೆ ಮಾಡೊ ಎನ್ನ|
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ||
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು |
ಹುಸಿಗೆ ಹಾಕದಿರೋ ಎನ್ನ ಹೃಷಿಕೇಶನೆ ||
ಬಿದ್ದು ಭವದನೇಕ ಜನುಮ ಬದ್ಧನಾಗಿ ಕಲುಷದಿಂದ |
ಗೆದ್ದು ಪೋಪ ಬುದ್ಧಿ ತೋರೋ ಪದ್ಮನಾಭನೆ ||
ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸೋ |
ಶ್ರೀ ಮಹಾನುಭಾವನಾದ ದಾಮೋದರ ||
ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ||
ಎಸು ಜನ್ಮ ಬಂದರೇನು ದಾಸನಲ್ಲವೇನು ನಾನು |
ಘಾಸಿ ಮಾಡದಿರು ಇನ್ನು ವಾಸುದೇವನೆ ||
ಬುದ್ಧಿಶೂನ್ಯನಾಗಿ ಎನ್ನ ಬದ್ಧಕಾಯ ಕುಹಕಮನವ |
ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ||
ಜನನಿ ಜನಕ ನೀನೆ ಎಂದು ನೆನೆವೆನಯ್ಯ ದೀನಬಂಧೋ |
ಎನಗೆ ಮುಕ್ತಿಪಾಲಿಸಿಂದು ಅನಿರುದ್ಧನೆ ||
ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಕ್ಷೇಮ |
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ ||
ಸಾಧು-ಸಂಗ ಕೊಟ್ಟು ನಿನ್ನ ಪಾದಭಜನೆಯಿತ್ತು ಎನ್ನ |
ಭೇದ ಮಾಡಿ ನೋಡದಿರೋ ಹೇ ಅಧೋಕ್ಷಜ ||
ಚಾರು ಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ |
ಭಾರ ಹಾಕಿರುವೆ ನಿನಗೆ ನಾರಸಿಂಹನೆ ||
ಸಂಚಿತಾದಿ ಪಾಪಗಳು ಕಿಂಚಿತಾದ ಪೀಡೆಗಳು ಮುಂಚಿತಾಗಿ |
ಕಳೆಯಬೇಕೋ ಸ್ವಾಮಿ ಅಚ್ಯುತ ||
ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ |
ಹೀನಬುದ್ದಿ ಬಿಡಿಸೋ ಮುನ್ನ ಶ್ರೀ ಜನಾರ್ಧನ ||
ಜಪತಪಾನುಷ್ಠಾನವಿಲ್ಲ ಕುಪಥಗಾಮಿಯಾದ ಎನ್ನ|
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ ||
ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ |
ಇರಿಸೋ ಭಕ್ತರೊಳು ಪರಮ ಪುರುಷ ಶ್ರೀ ಹರೇ ||
ಪುಟ್ಟಿಸಲೇ ಬೇಡ ಇನ್ನು ಪುಟ್ಟಿಸಿದಕೆ ಪಾಲಿಸಿನ್ನು |
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ ||
ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವರಿಗೆ |
ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ ||
ಮರೆಯದಲೆ ಹರಿಯ ನಾಮ ಬರೆದು ಓದಿ ಪೇಳುವರಿಗೆ |
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ ||
コメント